ಹೈಟೆಕ್ ಕಲ್ಯಾಣ ಮಂಟಪಗಳು ಚಪ್ಪರ ತೋರಣಗಳನ್ನು ಹಿಂದೆ ಸರಿಸಿವೆ. ಪಂಚಾಯತಿಯ ಸುಪರ್ಧಿಯಲ್ಲಿರುವ ಅಡುಗೆ ಪ್ರಾತ್ರೆಗಳನ್ನು ಪಡೆದು, ಬಾಣಸಿಗರನ್ನು ಕರೆಸಿ, ಪಟ್ಟಣದ ಮಾರುಕಟ್ಟೆಯಿಂದ ದಿನಸಿ ತರಿಸಿ ಒಲೆಗಳಿಗೆ ಕೊಳ್ಳಿ ಇಡುತ್ತಿದ್ದ ಕಾಲವು ಸವೆದು, ಈಗ ಕೇಟರಿಂಗ್ನವರನ್ನು ತಮ್ಮ ಮನೆಗೇ ಕರೆಯಿಸಿ ವ್ಯವಹಾರ ಕುದುರಿಸಿದರೆ ಸಾಕು, ಮದುವೆಯ ದಿನ ವಾಹನಗಳಲ್ಲಿ ಮದುವೆಯ ಔತಣ ಬಂದು ಬೀಳುತ್ತದೆ. ಮದುವೆಯ ಖರ್ಚಿನ ತೂಕ ಹೊತ್ತುಕೊಂಡವರಿಗೆ ತುಸು ಆಸರೆಯಾಗಲು ಹಣ, ಬೆಳ್ಳಿ, ಚಿನ್ನದ ರೂಪದಲ್ಲಿ ಬೀಳುತ್ತಿದ್ದ ಮುಯ್ಯಿ, ಈಗ ನಿರುಪಯೋಗಿ ಪ್ಲ್ಯಾಸ್ಟಿಕ್ ವಸ್ತುಗಳ ರೂಪದಲ್ಲಿ ಬಂದು ಮನೆಯ ಮೂಲೆ ಸೇರುತ್ತಿವೆ. ಅವು ಕ್ರಮೇಣ ಇತರರ ಸಮಾರಂಭಗಳಲ್ಲಿ ಹಂಚಿಹೋಗುತ್ತವೆ. ಗಾಡಿಯನ್ನು ಕಟ್ಟಿ ಮದುವೆಯ ಕರೆಯೋಲೆಯನ್ನು ಹೊತ್ತ್ಯೋಯುತ್ತಿದ್ದವರು, ಕಾಲ ಕ್ರಮೇಣ ಬಸ್ಸು-ರೈಲನ್ನೇರಿ, ನಂತರ ಬೈಕು-ಕಾರುಗಳಿಗೆ ಸೀಮಿತವಾಗಿ, ಈಗ ಇ-ಮೇಲ್, ಫೇಸ್ಬುಕ್, ವಾಟ್ಸಾಪ್ಗಳಲ್ಲಿ ಆಮಂತ್ರಿಸುತ್ತಿದ್ದಾರೆ.
10 ತಿಂಗಳ ನಮ್ಮ ಮಗಳು ಸ್ಮಯಾಳನ್ನು ಮೈಸೂರಿನ ಉದಯಗಿರಿಯಲ್ಲಿರುವ ನನ್ನ ಪತ್ನಿ ಪೂಜಾಳ ಅಜ್ಜಿಯ ಮನೆಯಲ್ಲಿ ಬಿಟ್ಟು ಬಂದಿದ್ದೆವು. ಈಗಾಗಲೇ ಅವಳಿಗೆ ನಾನು ಮತ್ತು ಪೂಜಾ ತನ್ನ ಹತ್ತಿರದವರು ಎಂಬ ಭಾವನೆ ಮೂಡಿಯಾಗಿತ್ತು. ಹೊಸಬರ ಜೊತೆ ಒಗ್ಗಿಕೊಳ್ಳಲು ಬಿಟ್ಟರೆ, ತನ್ನ ಅಪ್ಪ-ಅಮ್ಮನ ಹುಡುಕಾಟದಲ್ಲಿ ಅತ್ತ ಇತ್ತ ಇಣುಕುತ್ತಿದ್ದಳು. ತುಸು ಹೊತ್ತಾದರೆ ನಮ್ಮನ್ನು ನೆನಪಿಸಿಕೊಂಡು ರಚ್ಚೆ ಹಿಡಿಯುತ್ತಿದ್ದಳು. ಅವಳ ಅಳುವನ್ನು ನಿಲ್ಲಿಸುವ ಕಲೆಯುಳ್ಳವರು ಗೆಲ್ಲುತ್ತಿದ್ದರು. ಇಲ್ಲದವರು ಗಾಬರಿಯಾಗಿ ನಮಗೆ ಕರೆಮಾಡಿ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದ್ದರು. ಅವಳನ್ನು ಪೂಜಾಳ ಅಜ್ಜಿಯ ಮನೆಯಲ್ಲಿ ಬಿಟ್ಟಾಗಲೂ ಅದೇ ಪರಿಸ್ಥಿತಿ ಉಂಟಾಯಿತು. ಸಂಜೆ ನಾಲ್ಕಾಗುವವರೆಗೆ ಪೂಜಾಳಿಗೆ ಕಡಿಮೆಯೆಂದರೂ 20 ಕರೆಗಳು ಬಂದಿದ್ದವು. ಆಮಂತ್ರಿಸುವ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ, ವಾಪಸ್ಸು ಹೋಗಿ ನೋಡಿದಾಗ ಸ್ಮಯಾ ಅತ್ತು ಕರೆದು ಸುಸ್ತಾದಂತೆ ಕಂಡಳು. ನಮ್ಮನ್ನು ನೋಡಿ ತುಸು ಹರ್ಷವಾದಂತೆ ಕಂಡರೂ, ಎಂದಿನ ಚೆಟುವಟಿಕೆ ಇರಲಿಲ್ಲ. ರಾತ್ರಿಯ ಹೊತ್ತಿಗೆ ಅವಳ ಮೈ ಬಿಸಿಯಾಗಿತ್ತು. ಹೆತ್ತವರ ಕರಳು ಚುರುಕ್ ಎಂದಿತ್ತು.
ಹಳೆಯ ಪದ್ಧತಿಯಂತೆ ಮದುವೆಯ ಪ್ರಯುಕ್ತ ನಮ್ಮ ಮನೆಯ ಮೂಲೆ ಮೂಲೆಯನ್ನೂ ಸ್ವಚ್ಛಮಾಡುವ ಕೆಲಸ. ಪೂಜಾಳಿಗೆ ಮಾಹಿತಿ ತಂತ್ರಜ್ಞಾನದ ಕೆಲಸ. ಅವಳ ಅಜ್ಜಿಯ ಮನೆಯಲ್ಲಿ ವೃದ್ಧರನ್ನು ಬಿಟ್ಟರೆ ಎಲ್ಲರದೂ ದುಡಿಯುವ ಕೈಗಳು. ಮುಂದಿನ ಕೆಲವು ದಿನಗಳು ಎಲ್ಲರೂ ತಮ್ಮ ಕೆಲಸಗಳಲ್ಲಿ ಮಗ್ನರಾಗಿ, ಸ್ಮಯಾಳನ್ನು ನೋಡಿಕೊಳ್ಳಲು ಶಿಸುಪಾಲಕರ ಕೊರತೆ ಎದ್ದು ಕಾಣುತ್ತಿತ್ತು. ಪೂಜಾಳ ಚಡಪಡಿಕೆಯನ್ನು ಗಮನಿಸಿದ ನಾನು, ಕೆಲದಿನಗಳು ಸ್ಮಯಾಳ ಪೂರ್ಣ ಪ್ರಮಾಣದ ಶಿಸುಪಾಲಕನಾಗಿ ಅವಳ ಅಜ್ಜಿಯ ಮನೆಯಲ್ಲೇ ಉಳಿಯಲು ಒಪ್ಪಿಕೊಂಡೆ. ದಾದಿಯ ಕೆಲಸ ಅಷ್ಟು ಸುಲಭದ ಮಾತಲ್ಲ. ನಿನಗೆ ಆಗದ ಕೆಲಸ ಎಂದು ಹಲವು ಜನ ಎಚ್ಚರಿಸಿದರು.
ಸ್ಮಯಾ ಹುಟ್ಟಿದಾಗಿನಿಂದ ಅವಳ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದ ನನಗೆ, ಅವಳು ಹೆಚ್ಚು ತೊಂದರೆ ಕೊಡುವುದಿಲ್ಲವೆಂಬ ಪಿತಾ-ವಿಶ್ವಾಸವಿತ್ತು. ಸಮಯಕ್ಕೆ ಸರಿಯಾಗಿ ಊಟ ನಿದ್ದೆ ಗಿಟ್ಟಿಸಿದರೆ ಸಾಕು, ಸದಾ ಸಂತೋಷದಿಂದ ತನ್ನ ತೆಕ್ಕೆಯಲ್ಲಿಟ್ಟ ನಾಲ್ಕು ಆಟದ ಸಾಮಾನಿನ ಜೊತೆ ಇಡೀ ದಿನವೆಲ್ಲಾ ಕೆಳೆಯುವಳು. ಬೆಳಗ್ಗೆ ನನಗಿಂತ ಮುಂಚೆ ಎದ್ದು, ನನ್ನ ಮುಖವನ್ನು ಪರಚಿ ಎಚ್ಚರಿಸುತ್ತಿದ್ದನ್ನು ನಾನು ಪ್ರತಿಭಟಿಸಿ ಕಂಬಳಿಯನ್ನು ಮುಖದ ಮೇಲೆ ಹೊದ್ದರೆ, ತನ್ನ ಶಕ್ತಿಯನ್ನೆಲ್ಲಾ ಸೇರಿಸಿ ಅದನ್ನು ಸರಿಸುತ್ತಿದ್ದಳು. ಮುಂದಿನ ಒಂದು ತಾಸು ಹಾಸಿಗೆಯ ಮೇಲೆಯೇ ನನ್ನ ಅವಳ ಚೇಷ್ಟೆ-ತಮಾಷೆ ನಡೆದು, ಕೋಣೆಯ ಕೋನೆ ಕೋನೆಗಳಿಗೆ ಸಂತೋಷ ಹರಡುತ್ತಿತ್ತು. ಹೊರಗಡೆ ಹಸು, ನಾಯಿ, ಬೆಕ್ಕು ಮತ್ತ್ಯಾವುದೇ ಪ್ರಾಣಿಯಿರಲಿ, ಆಗಸದಲ್ಲಾರು ಪಕ್ಷಿ ಸಂಕಲುವೇ ಇರಲಿ, ಅವನ್ನು ನೋಡಿ ಗುರುತಿಸಿ ಒಂದೇ ರೀತಿಯಲ್ಲಿ ‘ಅಂಬಾ.. ಅಂಬಾ’ ಎಂದು ಸಂಭೂದಿಸುತ್ತಿದ್ದಳು. ಅವುಗಳ ಹತ್ತಿರಕ್ಕೆ ಕರೆದೋಯ್ದರೆ, ಕೊಂಚ ಹೆದರಿ, ತಿರುಗಿ ನನ್ನ ಎದೆಯನ್ನಪ್ಪಿ ಹಿಡಿಯುತ್ತಿದ್ದಳು. ಹೆದರಿದಳೇನೋ ಎಂದು ತಿಳಿದು ದೂರ ಹೋದರೆ, ಅವುಗಳ ಹತ್ತಿರವೇ ನಿಲ್ಲುವಂತೆ ಆಜ್ಞಾಪಿಸುತ್ತಿದ್ದನ್ನು ನೋಡಿ ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಗುತ್ತಿದ್ದೆ.
ನಾಯಿ-ಬೆಕ್ಕು-ಕಾಗೆ-ಹದ್ದು ಮತ್ತು ಇತರೆ ಪಕ್ಷಿಗಳಿದ್ದ ಉದ್ಯಾನ ವನಕ್ಕೆ ಪ್ರತೀ ಸಂಜೆ ಅವಳನ್ನು ಓಯ್ದರೆ, ಜುರಾಸಿಕ್ ಪಾರ್ಕ್ ಕಂಡಷ್ಟೇ ಖುಷಿ ಪಡುತ್ತಿದ್ದಳು. ಮನೆಯಲ್ಲಿ ನೆಲದ ಮೇಲೆ ತವೆಯುತ್ತಿದ್ದ ಅವಳು ಹುಲ್ಲಿನ ಹಾಸಿನ ಮೇಲೆ ಅಂಬೆಗಾಲಿಡುವುದನ್ನು ಕಲಿತು ಇರುವೆಗಳನ್ನು ಹಿಡಿಯುವ ಸರ್ಕಸ್ ಬೇರೆ. ಹುಲ್ಲಿನ ಮಧ್ಯೆ ಸಿಗುವ ಮರದ ತುಂಡುಗಳನ್ನು ಎತ್ತಿಕೊಂಡು ವಿಜ್ಞಾನಿಯಂತೆ ಪರಿಶೀಲಿಸುತ್ತಿದ್ದಳು. ಆಕಾಶದಿಂದ ಅವಳ ಮೈಮೇಲೆ ನಾಲ್ಕು ಹನಿಬಿದ್ದರೆ ಪುಳಕಿತಗೊಂಡು, ಅಷ್ಟದಿಕ್ಕಿಗೂ ತನ್ನ ಕಣ್ಣುಗಳನ್ನು ನೆಟ್ಟಿ ಹನಿಗಳು ಎಲ್ಲಿಂದ ಬೀಳುತ್ತಿರಬಹುದೆಂದು ಪತ್ತೇದಾರಿಕೆ ಕೆಲಸ ಮಾಡುತ್ತಿದ್ದಳು. ಕಣ್ಣುಗಳನ್ನು ಆಕಾಶದ ಮೇಲೆ ನೆಟ್ಟಿ, ಯಾವುದೋ ಯೋಚನಾ ಲಹರಿಯಲ್ಲಿ ಮುಳುಗಿರುತ್ತಿದ್ದ ನನ್ನ ಎದೆಯ ಮೇಲೆ ತನ್ನ ಪುಟ್ಟ ಕೈಗಳಿಂದ ಬಡಿದು ವಾಸ್ತವಕ್ಕೆ ಕರೆತರುತ್ತಿದ್ದಳು. ಟಿವಿಯ ಪರದೆಯ ಮೇಲೆ ಚಲನ ಚಿತ್ರದ ಹಾಡುಗಳನ್ನು ಬಿತ್ತರಿಸಿದರೆ, ತಾನೂ ಹಾಡುವಂತೆ ‘ಯಾ ಯಾ ಯಾ .. ಆ ಆ ಆ’ ಎಂದು ಒದರುತ್ತಿರುವುದನ್ನು ಮೊಬೈಲ್ನಲ್ಲಿ ಸೆರೆಹಿಡಿದು ಖುಷಿಪಟ್ಟೆ. ಅವಳಿಗೆ ಊಟ ಮಾಡಿಸುವ ಕೆಲಸವಂತೂ, ಯಾವ ವ್ಯಾಯಾಮಕ್ಕೂ ಕಡಿಮೆಯಿಲ್ಲದಂತೆ ನನ್ನ ಮೈಯ ಕೊಬ್ಬನ್ನು ಕರಗಿಸಿತು. ಸದಾ ನಗುತ್ತಿರುವುದನ್ನು ಕಂಡು ಅಸೂಹೆಗೊಂಡು, ಅವಳ ತೊಡೆಯನ್ನು ಚಿವುಟಿದಾಗ ಅವಳು ಅಳುವುದನ್ನು ನೋಡಿ ವಿಕೃತ ಸಂತೋಷ ಪಡುತ್ತಿದ್ದೆ. ನಂತರ ಸಮಾಧಾನ ಪಡಿಸಿ ತಂದೆಯ ಸಹಜ ಕಾಳಜಿಯನ್ನು ಮೆರೆಯುತ್ತಿದ್ದೆ. ನನ್ನ ಮತ್ತು ಸ್ಮಯಾಳ ಕೆಮಿಷ್ಟ್ರಿ ನೋಡಿದ ಪೂಜಾ ಅಸೂಹೆ ಪಟ್ಟಿದ್ದೂ ಉಂಟು.
ಆಕಸ್ಮಿಕವಾಗಿ ಒದಗಿಬಂದ ಈ ಶಿಶುಪಾಲಕನ ಕೆಲಸದ ಮಧ್ಯೆ ಸ್ಮಯಾಳ ಜೊತೆ ತುಂಟಾಟ ಚೇಷ್ಟೆಗಳೊಂದಿಗೆ ಕಳೆದ ಆ 5 ದಿನಗಳು ನನಗೆ ಹೊಸ ಅನುಭವವನ್ನು ಕೊಟ್ಟು ಬೇರೆಯ ಕಿನ್ನರಿ ಲೋಕಕ್ಕೇ ಕರೆದೋಯ್ದದಂತೂ ನಿಜ. ಒಬ್ಬ ತಂದೆಯಾಗಿ ಈ ಕ್ಷಣಗಳನ್ನು ಕಳೆದ ನನಗೆ, ಮಕ್ಕಳ ಮೇಲಿದ್ದ ಸೂಕ್ಷ್ಮತೆ ಮತ್ತು ಸಂವೇದನೆಯ ಅರಿವು ಹೆಚ್ಚು ಪಕ್ವವಾಗುವುದಕ್ಕೆ ಅನುಕೂಲವಾಯಿತು. ಆ ದಿನಗಳು ಆಗಿಂದಾಗ್ಗೆ ಬರಲೆಂದು ಆಶಿಸುತ್ತೇನೆ.
ರಾದ

Ah! sir, nice write up..
ಪ್ರತ್ಯುತ್ತರಅಳಿಸಿReally these are the moments that makes a phenomenal and remarkable fatherhood experience and also makes a proud father..
Probably Smaya had ignited a powerful spark to your insight life :-)
a touching write up..
Keep up your valuable writing..